ಕೃಷ್ಣ-ಸುಧಾಮರ ನಡುವಿನ ಸ್ನೇಹದ ದ್ಯೋತಕ -ಅವಲಕ್ಕಿ. ಅವಲಕ್ಕಿಯಿಂದ ನಾನಾ ತರಹದ ತಿಂಡಿಗಳನ್ನು ಮಾಡಬಹುದಾದರೂ ಈ ಗೊಜ್ಜವಲಕ್ಕಿಯ ರುಚಿಯೇ ಬಹಳ ವಿಶೇಷ. ಗೋಕುಲಾಷ್ಟಮಿಯಂದು ಉಪವಾಸ ಇದ್ದು ಕೇವಲ ಶ್ರೀಕೃಷ್ಣನಿಗೆ ಅರ್ಪಿಸಿದ ನೈವೇದ್ಯವನ್ನು ಸ್ವೀಕರಿಸುವವರಿಗೆ ಇದು ಸೂಕ್ತ. ಬೇರೆ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ತಕ್ಕುದಾದ ತಿನಿಸು.
(ಮಲೆನಾಡಿನ ಸಾಂಪ್ರದಾಯಕ ತಿನಿಸಾದ ಕುಟ್ಟವಲಕ್ಕಿ-ಇದರ ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ)

ಬೇಕಾಗುವ ಪದಾರ್ಥಗಳು:

Pic 1

ಗಟ್ಟಿ ಅವಲಕ್ಕಿ- 2 ದೊಡ್ಡ(ಜ್ಯೂಸ್ ಲೋಟ) ಲೋಟ

ಹುಣಸೆಹಣ್ಣು- 1 ಸಣ್ಣ ನಿಂಬೆಹಣ್ಣಿನ ಗಾತ್ರ

ಪುಡಿ ಮಾಡಿದ ಬೆಲ್ಲ- 3 ಚಮಚ

ಕಡಲೆಕಾಯಿ ಬೀಜ- 3-4 ಚಮಚ

ಬ್ಯಾಡಗಿ ಮೆಣಸಿನ ಕಾಯಿ-7-8

ತೆಂಗಿನ ತುರಿ- ಅರ್ಧ ಹೋಳಿಗೂ ಸ್ವಲ್ಪ ಕಡಿಮೆ

ಕರಿಬೇವು- 8-10 ಎಲೆ

ಎಣ್ಣೆ- 3-4 ಚಮಚ

ಸಾಸಿವೆ ಕಾಳು- ಅರ್ಧ          ಚಮಚ

ಅರಿಶಿನ- ಕಾಲು ಚಮಚ

ಉಪ್ಪು- ರುಚಿಗೆ

ಕೊಬ್ಬರಿ ಎಣ್ಣೆ- 2 ಚಮಚ(ಬೇಕೆಂದಲ್ಲಿ)

ಮಾಡುವ ವಿಧಾನ:

ಗಟ್ಟಿ ಅವಲಕ್ಕಿಯನ್ನು ಮಿಕ್ಸರ್ ನ ಡ್ರೈ ಜಾರ್ ಗೆ ಹಾಕಿ ಕೇವಲ 2-3 ಸೆಕೆಂಡ್ ಗಳ ಕಾಲ ತಿರುಗಿಸಿ. ಅವಲಕ್ಕಿಯು ಸ್ವಲ್ಪ ತರಿತರಿಯಾಗಿರಲಿ. ಪೂರ್ತಿ ನುಣ್ಣಗಾಗಬಾರದು.

Pic 2

ಹುಣಸೆ ಹಣ್ಣಿಗೆ 1 ಲೋಟದಷ್ಟು ಬಿಸಿ ನೀರು ಹಾಕಿಟ್ಟು ಸ್ವಲ್ಪ ಹೊತ್ತಿನ ನಂತರ ಕೈಯಲ್ಲಿ ಕಿವುಚಿ ಅದರ ರಸವನ್ನು ತೆಗೆದಿಟ್ಟುಕೊಳ್ಳಿ.

ಬೆಲ್ಲವನ್ನು ಪುಡಿ ಮಾಡಿಕೊಳ್ಳಿ.

ಹುಣಸೆಹಣ್ಣಿನ ರಸಕ್ಕೆ ಬೆಲ್ಲದ ಪುಡಿಯನ್ನು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಡಿ. ಬೆಲ್ಲವು ಕರಗಲಿ.

ಈಗ ಪುಡಿ ಮಾಡಿಕೊಂಡ ಅವಲಕ್ಕಿಯನ್ನು ಎರಡು ಮೂರು ಬಾರಿ ತೊಳೆದು ಚೆನ್ನಾಗಿ ಹಿಂಡಿ ಒಂದು ಬೇಸಿನ್ ಗೆ ಹಾಕಿ. ಈ ಅವಲಕ್ಕಿಗೆ ಮೊದಲೆ ಮಾಡಿಟ್ಟ ಹುಳಿ-ಬೆಲ್ಲ-ಉಪ್ಪಿನ ಮಿಶ್ರಣದ ರಸವನ್ನು ಹಾಕಿ ಕಲಸಿಟ್ಟು ಸುಮಾರು 20-30 ನಿಮಿಷ ಹಾಗೇ ಇಡಿ. ಅವಲಕ್ಕಿಯು ಹುಳಿ-ಬೆಲ್ಲದ ನೀರನ್ನು ಹೀರಿಕೊಂಡು ಗಟ್ಟಿಯಾಗಲಿ.

Pic3

ಬ್ಯಾಡಗಿ ಮೆಣಸಿನ ಕಾಯಿ, ತೆಂಗಿನ ತುರಿ,  ಕಾಲು ಚಮಚ ಸಾಸಿವೆಕಾಳನ್ನು ಮಿಕ್ಸರ್ ಗೆ ಹಾಕಿಕೊಂಡು ರುಬ್ಬಿಕೊಳ್ಳಿ. (ನೀರು ಸೇರಿಸಬಾರದು).

ಅರ್ಧ ಗಂಟೆಯ ನಂತರ, ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು, ಎಣ್ಣೆ ಹಾಕಿ. ಕಾದಾಗ ಕಡಲೆಕಾಯಿ ಬೀಜ, ಸಾಸಿವೆ ಕಾಳು ಹಾಕಿ. ಸಿಡಿದಾಗ ಹೆಚ್ಚಿಟ್ಟ ಕರಿಬೇವಿನ ಸೊಪ್ಪು ಹಾಕಿ, ರುಬ್ಬಿದ ಮಸಾಲೆ ಮತ್ತು ಅರಿಶಿನವನ್ನು ಹಾಕಿ ಹುರಿಯಿರಿ.

ಮಸಾಲೆಯನ್ನು ಹುರಿದ ನಂತರ, ಹುಳಿರಸದಲ್ಲಿ ನೆನೆಸಿಟ್ಟ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಕೈ ಮಗುಚಿ ಮುಚ್ಚಳವನ್ನು ಮುಚ್ಚಿಡಿ.

8-10 ನಿಮಿಷಗಳ ನಂತರ ಮುಚ್ಚುಳ ತೆಗೆದು, ಮತ್ತೊಮ್ಮೆ ಕೈ ಮಗುಚಿ ಅದರ ಮೇಲೆ (ಬೇಕೆಂದಲ್ಲಿ) ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿಡಿ. ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ರುಚಿಕರ ಗೊಜ್ಜವಲಕ್ಕಿಯು ನೈವೇದ್ಯಕ್ಕೆ ತಯಾರು. ಭಗವಂತನಿಗೆ ಅರ್ಪಿಸಿ, ನೀವೂ ಸ್ವೀಕರಿಸಿ.